Sulaadi on Sri Sripadarajaru – Vijayadasa Kruta

ಶ್ರೀಶ್ರಿಪಾದರಾಜರ ಸುಳಾದಿ – ಶ್ರ‍ೀವಿಜಯದಾಸಕೃತ

ಧ್ರುವತಾಳ
ಶ್ರೀಪಾದರಾಯ ಗುರುವೆ ಧೃಢಭಕುತಿಯಿಂದ ನಿಮ್ಮ
ಶ್ರೀಪಾದಪದುಮವನ್ನು ನೆರೆನಂಬಿದವನ ಭಾಗ್ಯ
ಅಪಾರವಲ್ಲದೆ ಲೇಶ ಕೊರತೆ ಇಲ್ಲ
ಗೋಪಾದ ಉದಕದೊಳು ರತುನ ದೊರಕಿದಂತೆ
ಪ್ರಾಪುತವಾಗುವುದು ಬಾಹೀರಂತರ ಸೌಖ್ಯ
ಲೋಪವಾಗದು ಒಂದು ಇಷ್ಟಾರ್ಥ ಪ್ರತಿದಿನ
ಆಪಾರ್ಥ ಎನಿಸದು ಪೇಳಿದ ವಚನಂಗಳು
ಆಪವರ್ಗಕೆ ಮಾರ್ಗ ಕೇವಲ ಖ್ಯಾತಿಯಾಗಿ
ತಾಪಸಿಯಾಗುವನು ಜನುಮಜನುಮದವು ಬಿಡದೆ
ಗೋಪಾಲಕೃಷ್ಣನ ಗುಣವೆ ಕೊಂಡಾಡುತ
ಆಪಾದಮೌಳಿ ಪರಿಯಂತ ನೋಡುವ ಮಹ
ಪಾಪರಹಿತರಾಗಿ ಸಂಚರಿಸುವರು ನಿತ್ಯ
ಪ್ರಾಪುತವಲ್ಲದೆ ಒಂದಾದರವರಿಗೆ
ಭೂಪಾರ ಬೇಡಿದ ಮನೋರಥಂಗಳು
ಶ್ರೀಪಾದರಾಯ ಶಿರಿ ನಾರಾಯಣಯೋಗಿ
ಈಪರಿ ಸ್ಮರಿಸಿದ ಜನರ ಸಂಗದಲ್ಲಿದ್ದ
ಆ ಪುಣ್ಯಪುರುಷನಿಗೆ ಕೈವಲ್ಯ ಇದ್ದಲ್ಲಿಗೆ
ಪೋಪಾದಲ್ಲದೆ ಅವನ ಆಯುಷ್ಯ ವ್ಯರ್ಥವಾಗಿ
ಭಾಪು ಇವರ ಬಿರುದು ಪೊತ್ತು ತಿರುಗಿದರೆ
ಶಾಪಾದಪಿಶರಾದಪಿ ಎನಿಸಿಕೊಂಬ
ದೀಪದ ಬೆಳಕಿನಲ್ಲಿ ಸರ್ವವು ಕಂಡಂತೆ
ವ್ಯಾಪುತದರ್ಶಿಯಾಗಿ ಯೋಗ್ಯತದಂತೆ ಕಾಂಬ
ದ್ವಿಪಾದ ಪಶುಗಾಣೊ ಈ ಮುನಿಯ ನಂಬದವ
ಕೂಪಾರವೆಂಬ ಮಹ ಘೋರದೊಳಗೆ ಇಪ್ಪ
ಆಪತ್ಕಾಲ ಮಿತ್ರ ವಿಜಯವಿಠ್ಠಲರೇಯನ
ವ್ಯಾಪಾರವನ್ನೆ ನೆನೆದು ನಲಿನಲಿದಾಡುವ ||1||

ಮಟ್ಟತಾಳ
ಭಕುತಿ ಬೇಕಾದವರು ಇವರ ಪಾದದಲ್ಲಿ
ಸಕಲಕಾಗಿ ಇದೇ ಸಾಧ್ಯವೆ ನಮಗೆಂದು
ಸಕುತನಾಗಲಿ ಬೇಕು ರಾಗಂಗಳ ತೊರೆದು
ಮುಕುತಿ ಮಾರ್ಗಕೆ ಇನ್ನು ಯಾತಕೆ ಅನುಮಾನ
ಕಕುಲಾತಿಯಿಂದ ಕಂಡಲ್ಲಿ ತಿರುಗಿ
ಹಕ್ಕಲ ಮನಸಿನಲ್ಲಿ ಕೆಟ್ಟುಪೋಗದಿರಿ
ಲಕುಮಿರಮಣ ನಮ್ಮ ವಿಜಯವಿಠಲರೇಯನ
ಭಕುತರೊಳಗೆ ಮಹಮಹಿಮ ಎನಿಸಿಕೊಂಬ ||2||

ತ್ರಿವಿಡಿತಾಳ
ನಂಬಿರೋ ಶ್ರೀಪಾದರಾಯರ ಚರಣವ
ಹಂಬಲಿಸದಿರಿ ಅನ್ಯಮಾರ್ಗ
ತುಂಬಿ ತುಳುಕುತಿಪ್ಪುದು ಇಹಪರದ ಭಾಗ್ಯ
ಉಂಬುವುದುಡುವದು ಅಡಿಗಡಿಗೆ
ಡಿಂಬದೊಳಗೆ ಹರಿಯ ಧ್ಯಾನಂಗತವಾಗಿ
ಕಾಂಬುವ ಲೇಶ ಪಾಪಂಗಳಿಲ್ಲದೆ
ಗಂಭೀರ ಸಂಸಾರವಾದುದು ಅದೆ ಅವಗೆ
ಇಂಬುಗೊಡುವುದು ವೈದೀಕವೆನಿಸಿ
ಅಂಬುಜಸಖ ತೇಜ ವಿಜಯವಿಠ್ಠಲರೇಯ
ಬೆಂಬಿಡದೆ ಭಜಿಸಬೇಕು ಈ ಪರಿಯಲ್ಲಿ ||3||

ಅಟ್ಟತಾಳ
ಇವರ ಪ್ರಸಾದವಾದರೆ ವ್ಯಾಸ ಮುನಿರಾಯ
ಕವಿರಾಯ ಪುರಂದರದಾಸರು ಮೊದಲಾ
ದವರ ಕರುಣವದು ಸಿದ್ಧಿಸುವುದು ಕೇಳಿ
ನವಭಕುತಿ ಪುಟ್ಟುವುದು ವ್ಯಕ್ತವಾಗಿ
ತವಕದಿಂದಲಿ ಚರಮ ದೇಹ ಬರುವುದು
ದಿವಿಜರು ಒಲಿದು ಸತ್ಕರ್ಮ ಮಾಡಿಸುವರು
ಸುವಿರುದ್ಧವಾದ ಜನರೆಲ್ಲ ನೆರೆದು ಭಾ
ಗ್ಯವನು ಬರಲಿ ಎಂದು ಕೊಂಡಾಡುವರು ನಿತ್ಯ
ಶ್ರವಣಕ್ಕೆ ತೋರುವ ವಿಜಯವಿಠ್ಠಲರೇಯನ
ದಿವಾರಾತ್ರಿಯಲಿ ನೊಡಿ ಸುಜನರ ಕೂಡುವಾ ||4||

ಆದಿತಾಳ
ನರಕ ನರಕದಲ್ಲಿ ಹೊರಳುವ ಆ ಮನುಜ
ಧರೆಯೊಳು ಇವರ ಚರಿತೆ ಒಂದೊಂದದ್ಭುತವಾಗಿ
ನಿರುತದಲ್ಲಿ ನೋಡೆ ತುಂಬಿ ಸೂಸುತಲಿದೆ
ಅರುಣೋದಯದಲೆದ್ದು ಶ್ರೀ ಪಾದರಾಯರೆಂದು
ಸ್ಮರಿಸಿದ ಮಾನವಂಗೆ ಸರ್ವಸಾಧನದಿಂದ
ಮರಮಗತಿಯಾದಂತೆ ಆಗುವದು ಸಿದ್ಧ
ಪರಿಹಾಸವಲ್ಲ ಕೇಳಿ ಅನುಭವ ತಿಳಿದವಗೆ
ಸುರ ಭೂಸುರ ಪ್ರಿಯ ವಿಜಯ ವಿಠಲರೇಯನ
(ವ್ಯಾಪಾರವನ್ನೇ ನೆನೆದು ನಲಿನಲಿದಾಡುವ)
ಕರುಣದಿಂದಲಿ ಮಹ ಉನ್ನತದಲ್ಲಿಪ್ಪರೊ ||5||

ಜತೆ
ಧ್ರುವ ಮರಿಯದಲೆ ಇದನೆ ಓದಿದವಗೆ ಬಂದ
ಭವರೋಗ ಪರಿಹಾರ ವಿಜಯವಿಠಲ ಒಲಿವಾ ||6||