Gajendra Moksha

ಶ್ರೀನಾಥ ಪಾರ್ವತಿಯ ನಾಥ ಶರಣೆಂಬೆ |
ವಾಣಿ ಭಾರತಿಯ ಗಜಮುಖನ ಬಲಗೊಂಬೆ ||
ನಾನು ಬಲ್ಲಷ್ಟು ಪೇಳುವೆನು ಈ ಕಥೆಯ |
ಶ್ರೀನಾಥ ಗಜರಾಜಗೊಲಿದ ಸಂಗತಿಯ || ೧ ||

ಭಪನ್ನ ದೇಶ ದೇಶದ ರಾಯರೊಳಗೆ |
ಉತ್ತಮದ ದೇಶ ಗೌಳಾದೇಶದಲ್ಲಿ ||
ವಿಷ್ಣು ಭಕ್ತರೊಳು ಇಂದ್ರದ್ಯುಮ್ನ ನೃಪನು |
ಮತ್ತೆ ಭೂಸುರರ ಪಾಲಿಸುತ್ತಿದ್ದ ತಾನು || ೨ ||

ಚಿತ್ತದಲ್ಲಿ ನರಹರಿಯ ನೆನೆದು ಚಿಂತಿಸುತ |
ಪುತ್ರಮಿತ್ರಾದಿ ಬಂಧುಗಳ ವರ್ಜಿಸುತ ||
ಧ್ಯಾನದಲಿ ನರಹರಿಯ ನೆನೆದು ಚಿಂತಿಸುತ |
ಆನೆಕುದುರೆಯ ರಾಜ್ಯಗಳನು ತ್ಯಜಿಸುತ್ತ || ೩ ||

ಸರ್ಪಶಯನನ ಧ್ಯಾನದಲ್ಲಿದ್ದ ತಾನು |
ಮತ್ತೆ ತ್ರಿಕೊಟಪರ್ವತಕಾಗಿ ಬಂದು ||
ನಾಗಶಯನನ ಧ್ಯಾನದಲ್ಲಿದ್ದ ತಾನು |
ಮೇರುಮಂದರದ ಸಮೀಪಕ್ಕೆ ಬಂದು ||೪ ||

ಸಿದ್ದ ಕಿನ್ನರರು ಗಂಧರ್ವರಿಗೆ ಸ್ಥಾನ |
ಎದ್ದೆದ್ದು ಕುಣಿವ ಮೃಗಖಗಗಳ ಸೀಮ ||
ಎತ್ತ ನೋಡಲು ನಾಲ್ಕು ದೇಶ ವಿಸ್ತೀರ್ಣ |
ಸುತ್ತ ಸುವರ್ಣಮಯ ವಸ್ತುಗಳ ಧಾಮ || ೫ ||

ಹಲವು ನದಿ ಹಲವು ಕೊಳ ಹಲವು ಸರೋವರದಿ |
ಹಲವು ಪರಿ ಪುಷ್ಪಗಳು ಮೆರೆವ ಅಳಿಕುಲದಿ ||
ಚೆಲುವ ಗಂಧರ್ವ ಕಿನ್ನರಿಯರ ಸ್ಥಾನ |
ಕುಣಿವ ನವಿಲುಗಳ ಗಿಳಿಕೋಗಿಲೆಯ ಗಾನ || ೬ ||

ಬಂದು ನದಿಯಲ್ಲಿ ಸ್ನಾನವನ ಮಾಡಿದನು |
ಚಂದ ದಿಕ್ಕಿದನು ದ್ವಾದಶ ನಾಮಗಳನು ||
ಸಂಧ್ಯಾವಂದನೆ ಮಾಡಿ ಪದ್ಮ ಆಸನದಿ |
ಇಂದಿರಾಪತಿಯ ಮನದೊಳಗಿರಿಸಿ ತಾನು || ೭ ||

ಅಂದಾಗ ಆಯೆಡೆಗೆ ಅಗಸ್ತ್ಯಮುನಿ ಬಂದ |
ನಿಂದಿರ್ದು ವಂದನೆಯ ಮಾಡಲಿಲ್ಲೆಂದ ||
ಎಂದೆನುತ ಮನದಿ ಕೋಪಿಸುತ ಶಾಪಿಸಿದ |
ಕುಂಜರದ ರೂಪಾಗಿ ಜನಿಸು ಹೋಗೆಂದ || ೮ ||

ತಪ್ಪುಂಟು ಮಹರ್ಷಿಯೆ ಕೇಳು ಬಿನ್ನಪವ |
ವಿಶ್ಯಾಪ ಎಂದಿಗಾಗುವುದೆನುತ ಪೇಳು ||
ವಿಷ್ಣು ಚಕ್ರವು ಬಂದು ನಿನ್ನ ಸೋಕುತಲೆ |
ವಿಶ್ಯಾಪ ಅಂದಿಗಾಗುವುದೆಂದು ಪೇಳೆ || ೯ ||

ಜ್ಞಾನವಡಗಿದವು ಅಜ್ಞಾನ ವಾವರಿಸೆ |
ಸೂರ್ಯ ಮುಳುಗಿದನು ಕತ್ತಲೆ ಮುಸುಕಂತೆ ||
ಧ್ಯಾನಿಸುತ ಹಿಂದುಮುಂದಾಗ ಕುಳಿತಿರಲು |
ಅನೆಯಾದನು ನೃಪನು ಆ ಕ್ಷಣದಿ ತಾನು || ೧೦ ||

ಮೇರುಪರ್ವತ ಕದಲಿ ಇಳಿದು ಬರುವಂತೆ |
ಮೇಲುಮದ ಕೀಳು ಮದ ಸುರಿಯೆ ಕುಂಭದಲಿ |
ಕಾಡಾನೆ ಕರಿಯಾನೆ ಮರಿಯಾನೆ ಸಹಿತ |
ಕೂಡಿಕೊಂಡೆಲ್ಲ ಒಂದಾಗಿ ಸಂಭ್ರಮಿಸಿ ||
ಕಾಡಾನೆಯಾಳಗ್ಹಲವು ಮಕ್ಕಳನೆ ಪಡೆದು |
ಕಾನನದೊಳಗೆ ಸಂಚರಿಸುತ್ತಿದ್ದ ತಾನು || ೧೧ ||

ಘಟ್ಟ ಬೆಟ್ಟಗಳ ಹತ್ತುತಲೆ ಇಳಿಯುತಲೆ |
ಹಿಟ್ಟು ಹಿಟ್ಟಾಗಿ ಕಲ್ಮರವ ತುಳಿಯುತಲೆ ||
ದಟ್ಟ ಡವಿಯೊಳಗೆ ಸಂಚರವ ಮಾಡುತಲೆ |
ಬತ್ತಿದವು ಕೆರೆತೊರೆಯು ಬೇಸಗೆಯು ಬರಲು || ೧೨ ||

ಕಂಡಕಂಡಲ್ಲಿ ಏರುತಲಿ ಇಳಿಯುತಲಿ |
ತುಂಡುತುಂಡಾಗಿ ಗಿಡಮರವ ಮುರಿಯುತಲಿ ||
ತಂಡತಂಡದಲ್ಲಿದ ತನ್ನ ಸತಿ ಸುತರು |
ಬೆಂಡಾಗಿ ಹಸಿವು ತೃಷೆಯಿಂದ ಬಳಲಿದರು || ೧೩ ||

ಬಾಳೆ ಕಿತ್ತಳೆನಿಂಬೆ ಚೂತ ಮಾದಲವು
ದಾಳಿಂಬ ದ್ರಾಕ್ಷಿಖರ್ಜೂರ ಪೇರಳೆಯು ||
ಮೇಲಾದ ಫಲಪುಷ್ಪದಿಂದ ಶೋಭಿಸಲು |
ತಾವರೆ ಕೊಳವೊಂದ ಕಂಡ ಗಜರಾಜ || ೧೪ ||

ನವರತ್ನ ಮುತ್ತು ಮಾಣಿಕ್ಯ ಸೋಪಾನ |
ಕೊಳದ ಸುತ್ತಲು ಮುತ್ತಿ ಚಕ್ರವಾಕಗಳು ||
ನಲಿಯುತಿವೆ ಹಲುವ ಹಕ್ಕಿಗಳು ಹಂಸಗಳು |
ಪರಿಮಳಿಸುವಾ ಕೊಳವೆ ಹೊಕ್ಕ ಗಜರಾಜ ||೧೫ ||

ಹೊಡೆಯುತಲಿ ಬಡೆಯುತಲಿ ಕುಡಿಯುತಲಿ ನೀರ |
ಮಡುವಿನಲ್ಲಿ ಚೆಲ್ಲುತಲಿ ನಲಿದುವೊಂದಾಗಿ ||
ಕಾಡಾನೆ ಕರಿಯಾನೆ ಮರಿಯಾನೆ ಸಹಿತ |
ಕೂಡಿದೋಂಡಿರಲಿಂತು ಸಮ್ಭ್ರದುದಿ ಜಲದಿ || ೧೬ ||

ಮುನಿಯು ಶಾಪದಲೊಂದು ಮಕರಿ ಮಡುವಿನೊಳು |
ಹಲವುಕಾಲದಿ ತಪಿಸಿ ಜೀವಿಸುತ್ತಿರಲು ||
ಮದಗಜವು ಪೊಕ್ಕು ಮಡುವನೆ ಕಲುಕು ತಿರಲು
ತಡೆಯದಾ ಮಕರಿ ಹಿಡಿಯಿತು ಕರಿಯ ಕಾಲು || ೧೭ ||

ಅತ್ತಿತ್ತ ನೋಡಿದನು ಸುತ್ತ ನೋಡಿದನು |
ಎತ್ತ ನೋಡಿದರೂ ಬಿಡದು ಆ ಮಕರಿ ಕಾಲು ||
ಎಳೆದೊಮ್ಮೆ ನೋಡಿದನು ಸೆಳದೊಮ್ಮೆ ನೋಡಿದನು |
ಹೇಗೆ ನೋಡಿದರು ಬಿಡದು ಆ ಮಕರಿ ಕಾಲು || ೧೮ ||

ತನ್ನ ಸತಿ ಸುತರೆಲ್ಲ ಸೆಳದರೊಂದಾಗಿ |
ತಮ್ಮ ಕೈಲಾಗದೆಂದೆನುತ ತಿರುಗಿದರು |
ಎನ್ನ ಪುಣ್ಯದ ಫಲವು ಹೋಗಿ ನೀವೆಂದ |
ದುಮ್ಮಾನದಿಂದ ದೊರದಲ್ಲಿದ್ದರವರು || ೧೯ ||

ಕಚ್ಚುತಲಿ ಸೆಳೆಯುತಲಿ ಆ ಮಕರಿ ಕಾಲು |
ರಕ್ತಮಯವಾಗಿ ತುಂಬಿತು ಕೊಳದ ನೀರು |
ಅಕ್ಕಟಾ ಎನಗಿನ್ನು ಗತಿಯಾರು ಎನುತ
ದಿಕ್ಕುಗೆಟ್ಟಂತೆ ಮೊರೆಯಿಟ್ಟ ಗಜರಾಜ || ೨೦ ||

ಅಚ್ಯುತಾನಂತ ಶ್ರೀಹರಿಯೆನ್ನ ಕಾಯೋ |
ಸಚ್ಚಿದಾನಂದ ಸರ್ವೇಶ್ವರನೆ ಕಾಯೋ ||
ಭಕ್ತವತ್ಸಲನೆ ಭವಭಂಜನನೆ ಕಾಯೋ |
ಕಷ್ಟಪಡುತೇನೆ ಕರುಣಿಸಿ ಕರುಣಿ ಕಾಯೋ || ೨೧ ||

ಎಂಭತ್ತು ನಾಲ್ಕು ಲಕ್ಷ ಜೀವರಾಶಿಗಳಾ |
ಇಂಬಿಟ್ಟ್ ಸಲಹೋ ಜಗದೀಶ್ವರನ ಕಾ ಯೋ |
ಜಂಗಮ ಸ್ಥಾವರಗದೊಳಗೆ ಪರಿಪೂರ್ಣ |
ಎಂಬಂಥ ನೀ ಎನ್ನ ಬಂಧನ ಬಿಡಿಸೊ || ೨೨ ||

ಈರೇಳು ಭುವನವನು ಹೃದಯದೊಳಗಿಟ್ಟೆ |
ಕಾದುಕೋ ಎಂದು ಗಜರಾಜ ವೊರೆಯಿಟ್ಟ |
ಅಹಾರ ನಿದ್ರೆ ಇಲ್ಲದೆ ಸಾವಿರ ವರುಷ|
ಬಹಳ ನೊದೆನೆ ಸ್ವಾಮಿ ಕಾಯೋ ಬಾಯೆಂದ || ೨೩ ||

ವೇದಗಳ ಕದ್ದು ಕೊಂಡೊಯ್ದ ದಾನವನ |
ಸಾಧಿಸಿದೆ ಭೇಧಿಸಿದೆ ಅವನ ಛೇದಿಸಿದೆ ||
ಆದಿ ನಿಗಮವ ತಂದು ಕಮಲಜನಿಗಿತ್ತೆ |
ವೇದಾಂತವೇದ್ಯ ಮತ್ಸ್ಯಾವತಾರ ಶರಣು || ೨೪ ||

ಸುರಾಸುರರು ಪಾಲ್ಗಡಲ ಮಥಿಸುತಿರಲು |
ಮರವೈರಿ ಹಾಸಿಗೆಯ ಹುರಿ ಮಾಡಿಕೊಂಡು |
ಭರದಿ ಮಂದರಗಿರಿಯು ಇಳಿಯುತಿರೆ ಬಂದು |
ಗಿರಿಯನೆತ್ತಿದ ಕೂರ್ಮ ಹರಿ ನಿನಗೆ ಶರನು || ೨೫ ||

ಸುರುಳಿ ಸುತ್ತಿದ ಭೂಮಿ ದಾಡೆಯಲಿ ತಂದೆ |
ದುರುಳ ಹಿರಣ್ಯಾಕ್ಷನನು ಬೇಗದಲಿ ಕೊಂದೆ |
ಧರಣಿದೇವಿಯನು ಸದಮಲದೊಳು ಗೆದ್ದೆ |
ವರಹಾವತಾರ ಶ್ರೀಹರಿ ನಿನಗೆ ಶರಣು || ೨೬ ||

ಬಾಲಕನು ಕರೆಯಲಿಕೆ ಕಂಬದಲಿ ಬಂದೆ |
ಸೀಳಿ ರಕ್ಕಸನ ಕರುಳಿನ ಮಾಲೆ ಹಾಕಿದೆ ||
ಶೀಲ ಪ್ರಲ್ಹಾದನಿಗೆ ಅಭಯವನು ಇತ್ತೆ |
ಶ್ರೀಲಕ್ಷ್ಮಿಪೊಡನಿದ್ದ ನರಸಿಂಹ ಶರನು || ೨೭ ||

ಬಲಿಯ ದಾನವ ಬೇಡಿ ಬ್ರಹ್ಮಚಾರಿಯಾಗಿ |
ನೆಲವನೆಲ್ಲವ ಮೂರು ಅಡಿಮಾಡಿ ಅಳೆದೆ ||
ಅಲೆದ ಪಾದದಲಿ ಭಾಗಿರಥಿಯ ತಂದೆ |
ಚೆಲುವೆ ವಾಮನಮೂರ್ತಿ ತ್ರಿವಿಕ್ರಮನೆ ಶರನು || ೨೮ ||

ದುಷ್ಟ ಕ್ಷತ್ರಿಯ ನೃಪರ ಕುಲವ ಸಂಹರಿಸಿ |
ರಕ್ತದಲಿ ಸ್ನಾನತರ್ಪಣವ ನೀ ಕೋಟ್ಟೆ
ಮತ್ತೆ ವೇದಾಂತ ಶಾಸ್ತ್ರಗಳ ನೆರೆ ಓದಿ |
ವಿಪ್ರ ಭಾರ್ಗವರಾಮ ಹರಿ ನಿನಗೆ ಶರಣು || ೨೯ ||

ಹರನ ಬಿಲ್ಲನೆ ಮುರಿದು ಧರಣಿಜೆಯ ತಂದೆ |
ದುರುಳ ರಾವಣಶಿರಗಳ ಹತ್ತು ತರಿದೆ |
ವರ ವಿಭೀಷಣಗವನ ರಾಜ್ಯ ಗಳನಿತ್ತೆ ||
ಶರಣರಕ್ಷಕ ಸೀತಾಪತಿ ರಾಮ ಶರಣು || ೩೦ ||

ಮಧುರೆಯಲಿ ಹುಟ್ಟಿ ಗೋಕುಲದಲಿ ಬೆಳೆದೆ |
ತರಳತನದಲಿ ಹಾಲು ಬೆಣ್ಣೆಗಳ ಮೆದ್ದೆ |
ತರುವ ಕಾಯುತ ಕೊಂದೆ ಹಲವು ರಕ್ಕಸರ |
ಬಲರಾಮಕೃಷ್ಣ ಗೋಪಾಲಕನೆ ಶರಣು || ೩೧ ||

ತ್ರಿಪುರಸತಿಯರ ವ್ರತ ಅಪಹರಿಸಿದವನೆ |
ಪೃಥವಿಯುಳು ಅಶ್ವತ್ಥನಾಗಿ ಮೆರೆದವನೆ ||
ಬಿಸಿಗಣ್ಣ ಹರಗೆ ಅಂಬಾಗಿ ನಿಂತವನೆ ||
ಪಶುಪತಿಪ್ರೀಯ ಬೌದ್ಧ ಅವತಾರ ಶರಣು || ೩೨ ||

ವರ್ಣಾಶ್ರಮಗಳೆಲ್ಲ ಒಂದಾಗಿ ಇರಲು |
ಬಿನ್ನಾಣದಿಂದ ತುರುಗವನೇರಿಕೊಂಡು ||
ಬನ್ನ ಪಡಿಸುತ ಹಲವು ಪಾತಕರ ಕೊಂದೆ |
ಬ್ರಹ್ಮಸ್ವರೂಪ ಕಲ್ಕ್ಯವತಾರ ಶರಣು || ೩೩ ||

ಅರಿಯದಂತಿರದೆ ಅಚ್ಯುತ ರಕ್ಶಿಸೆನ್ನ |
ಮರೆಯೆ ದೆಂದಿರದೆ ಮಾಧವ ರಕ್ಷಿಸೆನ್ನ ||
ಕೆಳೆನೆಂದೆನದೆ ಕೇಶವ ರಕ್ಷಿಸೆನ್ನ |
ಕಾಣಿನೆಂದೆನದೆ ಕರುಣಿಸಿ ರಕ್ಷಿಸೆನ್ನ || ೩೪ ||

ಕಾಯಕಂಜದ ಪ್ರಾಣ ಹೋಗುತಿದೆ ಮುನ್ನ |
ಯಾವಾಗ ಹರಿಬಂದು ಕಾಯ್ವನೋ ಎನ್ನ |
ಚೇರಿದನು ಕೂಗಿ ಮೊರೆಯಿಟ್ಟ ಗಜರಾಜ |
ದಾನವಾಂತಕನು ಕಿವಿಗೋಟ್ಟು ಕೇಳಿದನು || ೩೫ ||

ಕ್ಷಿರಾಬ್ಧಿಯಲಿ ವೈಕುಂಠ ನೆಲಸಿದ್ಧ |
ಶೇಷನಾ ಹಾಸಿಗೆಯ ಮೇಲೆ ಕುಳ್ಳಿರ್ದ ||
ಶ್ರೀಲಕ್ಷ್ಮೀ ಸಮ್ಮೇಳನದಿಂದ ಒಪ್ಪಿರಲು |
ಆಲಯಿಸಿ ಕೇಳಿದನೆ ಅಜನನೆ ಅಜನ ಪೆತ್ತವನು || ೩೬ ||

ಶಂಕಚಕ್ರಗಳಿಲ್ಲವೆಂದು ಶಂಕಿಸದೇ |
ಬಿಂಕದಿಂ ಗರುಡನ್ನ ಪಗಲೇರಿಸಿಕೊಳದೆ ||
ಪಂಕಜಾಕ್ಷಿಯ ಕೂಡ ತಾನು ಉಸಿರಿಸದೆ ||
ಪಂಕಜನಾಭ ಬಂದನು ಕೊಳದ ಕಡೆಗೆ || ೩೭ ||

ಸಜ್ಜೆ ಉಪ್ಪರಿಗೆಯಿಂದಿಳಿದು ಬರುವಾಗ |
ವಜ್ರಕುಂಡಲ ಕದಪು ಹಾರಗಳು ಹೊಳೆಯೆ |
ಹೊದ್ದ ಪೀತಾಂಬರವು ನೆಲಕೆ ಅಲೆಯುತಲಿ |
ಎದ್ದು ಬಂದನು ದಯಾಸಮುದ್ರ ಬಂದಂತೆ || ೩೮ ||

ಸಿಂಧುಸುತೆ ಪತಿಯೆಲ್ಲಿ ಪೋದನೋ ಎನುತ |
ಮಂದಗಮನೆಯು ಬರಲು ಪುರವೆಲ್ಲ ತೆರಳೆ ||
ವಂದಿಸದ ಗರುಡ ಗಂಧರ್ವರೊಗ್ಗಿನಲಿ |
ಅಂದಾಗ ಶಖಚಕ್ರವು ಕೂಡಿ ಬರಲು || ೩೯ ||

ಹರಿಯು ಗರುಡನನೇರಿ ಕರಿಯತ್ತ ಬರಲು |
ಹರ ಪಾರ್ವತಿಯರು ನಂದಿಯನರಿಕೊಳುತ ||
ಶಿರವ ಮೇಲಿನ ಗಂಗೆ ತುಳುಕಾಡುತಿರಲು |
ಹರ ಬಂದ ಕೈಲಾಸಪುರದಿಂದ ಇಳಿದು || ೪೦ ||

ತೊಡೆಯ ಮೇಲಿನ ಗೌರಿದೇವಿಯಳ ಸಹಿತ |
ಮುಡಿಯ ಮೇಲಿನ ಗಂಗೆ ತುಳುಕಾಡು ತಿರಲು |
ಹರಪಾರ್ವ ತಿದೇವಿ ವೃಷಭವನ್ನೇರಿ |
ಹರ ಬಂದ ಕೈಲಾಸಪುರದಿಂದ ಇಳಿದು || ೪೧ ||

ದೇವರ್ಷಿ ಬ್ರಹ್ಮರ್ಷಿ ರಾಜರ್ಷಿ ಸಹಿತ |
ದೇವಪುತ್ರಾದಿ ಸನಕಾದಿಗಳು ಕೂಡಿ ||
ಸುಮ್ಮನೇ ನಾರದನಂದು ನಡೆತಂದ |
ಧರ್ಮ ಸ್ವರೂಪವೆಲ್ಲಾ ನೆರೆದರಂದು || ೪೨ ||

ಬಂದ ಚಕ್ರವನು ಕರಕಮಲದಲಿ ತೆಗೆದು |
ಸಂಧಿಸಿಟ್ಟನು ಮಕರಿ ಹಲ್ಲು ಮುರಿವಂತೆ |
ಅಂದಾಗ ಅವನ ಶಾಪ ವಿಶ್ಯಾಪವಾಗಿ |
ಗಂಧರ್ವ ರೂಪಿನಲಿ ನಿಂತಿತಾ ಮಕರಿ || ೪೩ ||

ಹರಿಯ ಸಂದರ್ಶನವು ಮದಗಜಕೆ ಸೋಕುತಲೆ |
ಒದಗಿದವು ಶಂಖ ಚಕ್ರ ನಾಲ್ಕು ಕೈಗಳಲಿ |
ಉತ್ತ ಪಿತಾಂಬರವು ಕಿರೀಟ ಕುಂಡಲವು |
ಎಳೆತುಳಸಿಮಾಲೆಗಳು ಕೊರಳೊಳೊಪ್ಪಿದವು || ೪೪ ||

ಜಯಜಯ ಜಗನ್ನಾಥ ಜಯ ವಿಶ್ವಮೂರ್ತಿ |
ಜಯ ಜಯ ಜನಾರ್ಧನ ಜಯ ವಿಶ್ವರೂಪ |
ಜಯತು ಸರ್ವೋತ್ತಮನೆ ಕ್ಷಿರಾಬ್ಧಿಶಯನ |
ಜಯವೆಂದು ಪದಗಳಿಗೆ ಬಂದು ಎರಗಿದನು || ೪೫ ||

ಇಂದಿವನ ಭಾಗ್ಯವನು ನೋಡುವರು ಕೆಲರು |
ಇಂದಿರಾ ಪತಿಯ ಕೊಂಡಾಡುವರು ಕೆಲರು |
ಮಂದಾರ ಹೊಮಳೆಯ ಕರೆಯುತ್ತ ಸುರರಂ |
ದುಂದುಭಿ ವಾದ್ಯಗಳ ವೈಭವ ಗಳಿರಲು || ೪೬ ||

ಸಿರಿಸಹಿತ ಹರಿಯು ಗರುಡ ನೇರಿಕೊಂಡು
ಕರಿರಾಜನೊಡನೆ ವೈಕುಂಠಕ್ಕೆ ಬರಲು ||
ಹರಪಾರ್ವತಿಯರು ಕೈಲಾಸಕೆ ತೆರಳೆ |
ತರತರದ ವಾಹನಾದಿ ಸುರರು ತೆರಳಿದರು || ೪೭ ||

ಹೊತ್ತಾರೆ ಎದ್ದು ಈ ಕಥೆ ಹೇಳಿ ಕೇಳಿದವರಿಗೆ |
ದುಃಸ್ವಪ್ನ ದುರ್ಬುಧಿ ದುರ್ವ್ಯಸನ ಕಳೆವದು ||
ಸರ್ಪಾರಿ ವಾಹನನ ಧ್ಯಾನ ದೊಳಗಿರಲು |
ಸತ್ಸಂಗ ಸಾಯುಜ್ಯ ಪದವಿ ದೊರಕುಪುದು || ೪೮ ||

ಹರಿಯ ನೆನೆ ಹರಿಯ ನೆನೆ ಹರಿಯ ನೆನೆ ಮನವೆ
ಮರೆಯದಲೆ ಮಾಧವನ ನೆನೆ ಕಂಡ್ಯ ಮನವೆ |
ಹರಿಯ ನೆನೆದವರಿಗೆ ಪರಮ ಪದವಿಯು ಉಂಟು |
ಕರಿರಾಜವರದನ್ನ ಶರಣೆಂದು ಭಜಿಸು || ೪೯ ||

ಜಯತು ದ್ರುವರಾಯನಿಗೆ ವರವಿತ್ತ ದೇವ |
ಜಯತು ಪ್ರಲ್ಹಾದಭಯವಿತ್ತ ದೇವ |
ಜಯತು ದ್ರೌಪದಿಯಭಿಮಾನ ಕಾಯ್ದು ದೇವಾ
ಜಯತು ಜಯ ಹಯವದನ ಶ್ರೀವಾಸುದೇವ || ೫೦ ||