Suladhi on Digvijaya moolaraama devaru – Rayaru Mutt(Vijayeendra theertharu)

ಅಟ್ಟತಾಳ
ಪರಬೊಮ್ಮ ಹರಿಯು ತಾ ನರರೂಪವ ತಾಳಿದ
ನರನಾದ ದಶರಥನ ವರದೇಹದಲವತರಿಸಿ
ಸಿರಿರಾಮನೆಂಬ ಪುಣ್ಯನಾಮದಿಂದ ಮೆರೆವುತ್ತಿರೆ
ಹರುಷದಿಂದ ಲೀಲೆಗೈದು ಕರೆಯ ಬಂದ ಕೌಶಿಕನ
ಉರು ಯಜ್ಞ ವಿಘ್ನವನು ಪರಿಹರಿಸುವುದಕ್ಕಾಗಿ ಪರಬೊಮ್ಮ
ಪರಿತಂದು ವಿಘ್ನವನು ಪರಿಹರಿಸಿದ ಮುನಿವರನ
ಹರುಷದಿಂದ ಪರಮಾನಂದ ಶರಧಿಯಲೋಲಾಡಿಸಿದ
ಸಿರಿ ವಿಜಯೀಂದ್ರ ನಾಮ ಹೊರೆಯಲೆಮ್ಮ ಯಾವಾಗಲೂ ||1||

ಮಠ್ಯ
ಈತನೆಂತು ಯಜ್ಞದ ವಿಘ್ನವ ಪರಿಹರಿಸುವ
ಪೋತ ಮಹಾದ್ಭುತರಂತಿಹ ರಕ್ಕಸರ
ವೀತ ಭಯನಾಗಿ ಕೊಲ್ಲುವುದೆಂತೊ
ಭೂತಳಕಚ್ಚರಿ ವಿಜಯೀಂದ್ರ ರಾಮನ ಚರಿತ ||2||

ರೂಪಕ
ಜನಕನೆಂಬ ಜನಪತಿಯ ಮನೆಗೆ ಹೋಗಿ
ಜಾನಕಿಯ ಮನಕೆ ಹರುಷವಪ್ಪಂತೆ
ಜನಪದ ಕೈವಾರಿಸುತ್ತಿರೆ ಮನಕೆ
ಅಣಕವಾಡಿ ಶಿವನಧನುವ ಮುರಿದ ವಿಜಯೀಂದ್ರರಾಮ
ಮನಕೆ ಹರುಷವಪ್ಪಂತೆ ||3||

ಝಂಪೆ
ಇವನರ್ಭಕನೆ ಇವನ ಮುನಿಗಳಾದವರೆಲ್ಲ ಮನದಿ
ಭಾವಿಸಿ ಕಾಣದೆಂಬುದರಿಯಾ ಎಲೆ ರಮಣಿ
ಭುವನ ಪಾವನ ನಾಮ ಸಿರಿ ವಿಜಯೀಂದ್ರರಾಮ
ಭಾವಿಸೆ ಮನದಿ ||4||

ತ್ರಿಪುಟ
ರಾಮ ಜಾನಕಿಯ ಮದುವೆಯಾಗಿ ಬರುವಾಗ ಪರಶು-
ರಾಮನಿದಿರಸಿ ಅವನ ಬಿಲ್ಲನೇರಿಸಿ ಮೆರೆದ
ರಾಮನಿದಿರಸಿ ಶ್ಯಾಮಲಾಂಗ ವಿಜಯೀಂದ್ರ
ರಾಮ ಬಾಲಕನೆ ಹೇಳಾ ||5||

ಅಟ್ಟ
ನೊಸಲಲಿ ಕಣ್ಣು ಪಡೆದವನ ಗೆಲಿದೆ
ಅಸುಳೆಯೆಂದು ಬೆಂಕೊಂಡು ಕಂದನ ಕಾಯ್ದೆ
ಕುಸುರಿಜವಕೊಂದೆ ಬಾಣದಿಂದ ನಿಮಿಷದಿ
ಅಸಮ ವಿಕ್ರಮ ವಿಜಯೀಂದ್ರರಾಮ ಜಗದೊಳು ||6||

ಏಕ
ಉರವಣಿಸಿ ಬಹ ತಾಟಕಿಯ ಮಹಾ
ಕರಗಳ ನಿಮಿಷದಿ ಕತ್ತರಿಸುಯೆಂದು
ಹಿರಿಯರು ಪೇಳಲಿದಿರು ಪೇಳದೆ ಅಸುರೆಯ
ಕರಗಳ ಕಡಿದ ವಿಜಯೀಂದ್ರರಾಮ
ಸರಸಿಜಾಸನ ವಿನುತ ಸಿರಿ ಮೂಲರಾಮ ||7||

ಜತೆ
ಲೋಕಾಭಿರಾಮ ಸದ್ಗುಣಧಾಮ
ಲೋಕೈಕಭೌಮ ವಿಜಯೀಂದ್ರರಾಮ ||8||