Vyasarayara sulaadhi

ಧ್ರುವತಾಳ
ಬಂದು ದಿವಸ ನಾರಂದ ಮುನೀಶ್ವರ
ನಂದ ಗೋಪನ ಕಂದ ಇಂದಿರಾರಮಣನ
ಸಂದರುಶನ ಮಾಡಿ ಬಂದ ಹರಿವರ್ಷ
ವೆಂದೆಂಬೊ ಖಂಡದೊಳಾನಂದ ಗಾಯನದಿಂದ
ನಿಂದು ನರ ಮೃಗಗೆ ವಂದಿಸಿ ತೆರಳುತಿರೆ
ಅಂದು ಪ್ರಹ್ಲಾದನು ದ್ವಂದ್ವ ಪಾದಕೆರಗಿ
ಇಂದು ದ್ವಾರಕೆ ಪುರದಿಂದ ಪೊರಟು ನಡೆ
ತಂದ ವಾರ್ತೆ ಎನಗೊಂದುಸರಲಿಲ್ಲ ದೀನ
ಬಂಧು ಎನಿಸಿ ಕೊಂಬ ವೃಂದಾರಕ ಮುನಿ
ಮುಂದುಗಾಣದಲೆ ಕಣ್ಣಿಂದ ಬಾಷ್ಪೋದಕ
ಬಿಂದುಗಳುದರಿಸುತ ನಂದನಂದನ ಚರಿತೆ
ಒಂದೊಂದು ಪೇಳಲದರಿಂದ ಮೈಮರೆದು ಹೋ
ಎಂದು ಶಿರವದೂಗಿ ಮುನಿಗೆ ಎರಗಿ
ಕಂಧರ ಬಾಗಿ ನಾನೆಂದಿಗೆ ಕೃಷ್ಣನ
ವಂದಿಸುವೆನೆನಲು ಮಂದಹಾಸದಿಂದ
ಮಂದರೋದ್ಧರ ವಿಜಯವಿಠ್ಠಲ ಯಶೋದೆ
ಕಂದನ ಲೀಲೆಯಾನಂದ ಪೇಳೆನ್ನ ಮುನಿ
ಅಂದು ವಿವರಿಸಿದ ಅಂದವಾಗಿ ನಲಿದು ||1||

ಮಟ್ಟತಾಳ
ಸಕಲದೇವರೊಳು ರುಕ್ಮಿಣಿ ಅರಸನ್ನ
ಸುಖಸಮುದಾಯಕೆ ಅಕಟ ನಾನೇನೆಂಬೆ
ಸಕಲಭೂಷಣ ಸುರನಿಕರ ಸಂದಣಿಯಲ್ಲಿ
ಮುಕುತಾಮುಕುತರ ಸೇವಕರ ಕರದಿಂದ
ಅಕಳಂಕನಾಗಿ ಸಕಲ ಸೇವಿಯಗೊಂಬ
ಮಕ್ಕಳಮಾಣಿಕ ರಂಗ ವಿಜಯ ವಿಠ್ಠಲನ್ನ
ಭಕುತರೊಳಗ್ರಣಿ ಯುಕುತಿಯಲಿ ಪೇಳಿದನು ||2||

ತ್ರಿವಿಡಿತಾಳ
ಹರಿಯ ಪಾದಕ್ಕೆರಗಿ ವರಪ್ರಹ್ಲಾದನು
ಎರದೊಂದು ಮಾರ್ಗದಲ್ಲಿ ಕೃಷ್ಣನ ಮೂರುತಿಯ
ಪರಿಪರಿಯಲ್ಲಿ ಭಜಿಸಿ ಧನ್ಯನಾಗುವೆನೆಂದು
ಸುರ ಮುನಿಗೆರಗಿ ನಿಂದಿರಲಾಗಿ ನಾರದ
ಕರುಣದಿಂದಲಿ ಉತ್ತರವ ಪೇಳಿದ ನಾನೀ
ಧರೆಯೊಳು ಜನಿಸುವ ವರವ ಪಡೆದು ಇಪ್ಪೆ
ಪರಮ ಭಾಗವತರ ರಮಣಿಯೆ ನೀನು
ಧಾರುಣಿಯೊಳಗವತರಿಸಿ ಅಧಿಕವಾದ
ಮಾರುತ ಮತದೊಳಗೆ ಚರಿಸಿ ಕೃಷ್ಣನ ಪೂಜೆ
ನಿರುತ ಬಿಡದೆ ಮಾಡಿ ಹರುಷ ಬಡೆಂದೆನಲು
ಕರುಣವಾರಿಧಿ ನರಹರಿ ವಿಜಯ ವಿಠಲನ್ನ
ಸ್ಮರಿಸಿ ಶೇಷಾಂಶ ಧರಿಸಿ ದೇಹವ ತಾಳ್ದಾ||3||

ಅಟ್ಟತಾಳ
ಬನ್ನೂರು ಸ್ಥಳದಲ್ಲಿ ಜನಿಸಿದರು ಬ್ರ
ಹ್ಮಣ್ಯ ತೀರ್ಥರಪಾವನ್ನ ಕರದಲ್ಲಿ
ಸನ್ಮನವಾಗಿ ಪಾಲನವಾದರು ಮುನಿ
ರನ್ನ ಶ್ರೀ ಪಾದರಾಯನ್ನ ಬಳಿಯಲ್ಲಿ
ಚನ್ನಾಗಿ ವಿದ್ಯಾ ಸಂಪನ್ನವಾದರು ಬಲು
ಅನ್ಯಮತವ ಬೇವಾಟನ್ನ ಮಾಡಿ ಸುಪ್ರ
ಸನ್ನ ಹರಿಯ ಕಾರುಣ್ಯವ ಪಡೆದರು
ಚನ್ನಾಗಿ ಕೃಷ್ಣ ಶ್ರೀ ವಿಜಯ ವಿಠಲನ್ನ
ಸನ್ನುತಿಸಿ ಧ್ಯಾನವನ್ನೆ ಕೈಕೊಂಡ ||4||

ಆದಿತಾಳ
ಗುರು ವ್ಯಾಸಮುನಿಯೆಂದು ಧರಣಿಯೊಳಗೆ ಪೆಸರಾಗಿ
ನೆರದು ಸಜ್ಜನರಿಗೆರೆದು ನ್ಯಾಯಶಾಸ್ತ್ರ
ಅರುಹಿ ವೈಷ್ಣವಮತ ಅದರಿಂದ ಉದ್ಧರಿಸಿ
ಪೊರೆದು ನಂಬಿದವರ ಎರಡೊಂದು ಜನ್ಮ
ಸುಂದರ ಗರ್ಭದಲಿ ಬಂದು
ಪರಿಪೂರ್ಣ ಜ್ಞಾನಭಕ್ತಿ ವೈರಾಗ್ಯದಲ್ಲಿ ನಡೆದು
ಎರಡೊಂದು ಉತ್ತಮ ಗುರುಸಂತತಿಯೊಳಗೆ
ಚರಿಸಿ ಚತುರಾಶ್ರಮ ಧರಿಸಿ ಚತುರರಾಗಿ
ಭರತ ಖಂಡದೊಳು ಪಸರಿಸಿ ಕೀರ್ತಿಯ ಪಡೆದು
ಭರದಿಂದ ವಾಲಗವ ಸುರರಿಂದ ಕೈಕೊಳುತ
ಪರಲೋಕದಲಿ ಒಪ್ಪಿ ನಿರಾಮಯ
ಗುಣನಿಧಿ ವಿಜಯವಿಠ್ಠಲರೇಯನ
ನೆರೆನಂಬಿ ಪ್ರತಿದಿನ ಮೆರೆದು ಮೂರ್ಧನ್ಯರಾಗಿ||5||

ಜತೆ
ಪ್ರಹ್ಲಾದನೇ ವ್ಯಾಸಮುನಿಯೇ ರಾಘವೇಂದ್ರ
ಅಹುದೆಂದು ಭಜಿಸಿರೋ ವಿಜಯ ವಿಠ್ಠಲ ಒಲಿವಾ||6||